ಸಂದೇಶ್ ಕಂಬೈನ್ಸ್ ಲಾಂಛನದಲ್ಲಿ ಸಂದೇಶ್ನಾಗರಾಜ್ ಅವರು ನಿರ್ಮಿಸುತ್ತಿರುವ ‘ವೀರಬಾಹು ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಚಿತ್ರದಲ್ಲಿ ನಾಯಕನದು ಶಾಂತ ಸ್ವಭಾವ. ಯಾರ ತಂಟೆಗೂ ಹೋದವನಲ್ಲ. ತನ್ನಷ್ಟಕ್ಕೆ ತಾನಿರುವಾತ. ಇಂಥ ವ್ಯಕ್ತಿಯ ಮೇಲೆ ಪೊಲೀಸಿನವರ ಕಣ್ಣು ಬೀಳುತ್ತದೆ. ಯಾರೊ ಮಾಡಿದ ಅಪರಾಧ ಈ ವ್ಯಕ್ತಿಯ ಮೇಲೆ ಬರುತ್ತದೆ. ಠಾಣೆಯಲ್ಲಿ ಬೆತ್ತದೇಟು ನೀಡಿದ ಪೊಲೀಸರು ಕೊನೆಗೆ ಈತನನ್ನು ಬಳ್ಳಾರಿ ಜೈಲಿಗೆ ಕಳಹಿಸುತ್ತಾರೆ. ಈ ಸನ್ನಿವೇಶವನ್ನು ಮೈಸೂರಿನ ಸಮ್ಮರ್ ಪ್ಯಾಲೆಸ್ ಆವರಣದಲ್ಲಿ ಕಲಾ ನಿರ್ದೇಶಕ ರೇವಣ್ಣ ಮಳವಳ್ಳಿ ನಿರ್ಮಿಸಿದ ಜೈಲ್ ಸೆಟ್ನಲ್ಲಿ ಚಿತ್ರಿಸಿಕೊಳ್ಳಲಾಯಿತು. ನಾಯಕ ವಿಜಯ್ ಹಾಗೂ ಸಹ ಕಲಾವಿದರು ಈ ಸನ್ನಿವೇಶದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಮೈಸೂರಿನಲ್ಲಿ ಕೆಲವು ದಿನಗಳ ಚಿತ್ರೀಕರಣವಾದ ನಂತರ ಈಗ ‘ವೀರಬಾಹು ಚಿತ್ರದ ಚಿತ್ರೀಕರಣ ಮೇಲುಕೋಟೆಯಲ್ಲಿ ನಡೆಯುತ್ತಿದೆ ಎಂದು ನಿರ್ದೇಶಕ ಎಸ್.ಮಹೇಂದರ್ ತಿಳಿಸಿದ್ದಾರೆ.
ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಅನಂತ್ ಅರಸ್ ಅವರ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ, ಪ್ರಸಾದ್ ಸಹ ನಿರ್ದೇಶನ, ಎಂ.ಎಸ್.ರಮೇಶ್ ಸಂಭಾಷಣೆ ಹಾಗೂ ವಿಜಯಕುಮಾರ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿಜಯ್, ನಿಧಿಸುಬ್ಬಯ್ಯ, ರಂಗಾಯಣರಘು, ರಾಜುತಾಳಿಕೋಟೆ, ಅವಿನಾಶ್, ಎಂ.ಎನ್.ಲಕ್ಷ್ಮೀದೇವಿ, ಎ.ಟಿ.ರಘು, ಅಚ್ಯುತ, ವಿನಯಪ್ರಸಾದ್ ಮುಂತಾದವರಿದ್ದಾರೆ.